ದಾವಣಗೆರೆ: ಆಸ್ತಿ ವಿಚಾರಕ್ಕೆ ಸುಪಾರಿ ನೀಡಿ ಚಿಕ್ಕಪ್ಪನನ್ನೇ ಕೊಲೆ ಮಾಡಿಸಿದ ಆರೋಪಿಗಳು ಹಾಗೂ ಸುಪಾರಿ ಹಂತಕರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆಯ ಗೋಪನಾಳ್ ಗ್ರಾಮದ ಸತೀಶ, ಲಿಂಗದಹಳ್ಳಿಯ ಪ್ರಭು ಅಲಿಯಾಸ್ ಮಾಸ್ತಿ, ನಿಟುವಳ್ಳಿಯ ಆಶಾ ವೈನ್ಸ್ ಮುಂಭಾಗದ ವಾಸಿ ಪ್ರಶಾಂತ್ ನಾಯ್ಕ್ ಅಲಿಯಾಸ್ ಪಿಲ್ಲಿ, ಪ್ರಕರಣದ ನಾಲ್ಕನೇ ಆರೋಪಿ ಗೋಪನಾಳ್ ಗ್ರಾಮದ ಸುಜಾತ, ಶಿವಮೂರ್ತೆಪ್ಪ ಬಂಧಿತ ಆರೋಪಿಗಳು.ಘಟನೆ ಹಿನ್ನೆಲೆ: ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಲ್ಲೂರು ಭದ್ರ ಉಪ ನಾಲೆಯಲ್ಲಿ ಕಳೆದ ವರ್ಷದ ನವೆಂಬರ್ 22ರಂದು ಅಪರಿಚಿತ ವ್ಯಕ್ತಿಯ ಶವ ಅನುಮಾನಸ್ಪಾದ ರೀತಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ದಾವಣಗೆರೆ ತಾಲ್ಲೂಕು ಗೋಪನಾಳ್ ಗ್ರಾಮದ ವಾಸಿ ಸಿದ್ದಲಿಂಗಪ್ಪ (55) ಬೋರ್ ಪಾಯಿಂಟ್ ಮಾಡುವ ಕೆಲಸ ಮಾಡುತ್ತಿದ್ದವರು ಎಂದು ಮೃತನ ಸೊಸೆ ದೊಡ್ಡಮ್ಮ ಗುರುತಿಸಿದ್ದರು.ದೊಡ್ಡಮ್ಮ ಅವರು ನನ್ನ ಮಾವ ಸಿದ್ದಲಿಂಗಪ್ಪನ ಅಸಹಜ ಸಾವಲ್ಲ, ಇದು ಕೊಲೆ. ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಚನ್ನಗಿರಿ ಪೊಲೀಸರಿಗೆ ದೂರು ಕೊಟ್ಟಿದ್ದರು.ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾದರು. ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯ್ ಕುಮಾರ್ ಎಂ. ಸಂತೋಷ್, ಮಂಜುನಾಥ್ ಮಾರ್ಗದರ್ಶನದಲ್ಲಿ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಅವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಯವರನ್ನು ಒಳಗೊಂಡ ತಂಡಗಳ ರಚನೆ ಮಾಡಲಾಗಿತ್ತು.ಪ್ರಕರಣದ ಮೊದಲ ಆರೋಪಿ ಸತೀಶ ಹಾಗೂ 24ರಂದು ಪ್ರಕರಣದ ಎರಡನೇ ಆರೋಪಿ ಪ್ರಭು ಅಲಿಯಾಸ್ ಮಾಸ್ತಿ, ಮೂರನೇ ಆರೋಪಿ ಪ್ರಶಾಂತ್ ನಾಯ್ಕ್ ಅಲಿಯಾಸ್ ಪಿಲ್ಲಿ, ನಾಲ್ಕನೇ ಆರೋಪಿ ಸುಜಾತ, ಐದನೇ ಆರೋಪಿ ಶಿವಮೂರ್ತೆಪ್ಪ ಅವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲಾಗಿತ್ತು. ಎ1, ಎ4, ಎ5 ಆರೋಪಿತರು ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಿದ್ದಲಿಂಗಪ್ಪನನ್ನು ಕೊಲೆ ಮಾಡಿಸಲು ಸಂಚು ರೂಪಿಸಿ, ಪ್ರಭು ಅಲಿಯಾಸ್ ಮಾಸ್ತಿ, ಪ್ರಶಾಂತ್ ನಾಯ್ಕ್ ಅಲಿಯಾಸ್ ಪಿಲ್ಲಿಗೆ ಕೊಲೆ ಮಾಡಲು 1 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದರು.ನವೆಂಬರ್ 21ರಂದು ಸಂಜೆ ಸಮಯದಲ್ಲಿ ಸಿದ್ದಲಿಂಗಪ್ಪನ್ನು ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ಹೇಳಿ ತೊಗಲೇರಿ ಕ್ರಾಸ್ ನಿಂದ ಆಟೋದಲ್ಲಿ ಚನ್ನಗಿರಿ ತಾಲ್ಲೂಕು ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡುಹೋಗಿ, ಪೂರ್ವ ನಿಯೋಜನೆಯಂತೆ ಸಿದ್ದಲಿಂಗಪ್ಪನನ್ನು ಆರೋಪಿತರು ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಸಿದ್ದಲಿಂಗಪ್ಪನ ಶವವನ್ನು ನಲ್ಲೂರು ಸಮೀಪದ ಭದ್ರ ಚಾನಲ್ ಗೆ ತಂದು ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿದ್ದು ತನಿಖೆಯಿಂದ ತಿಳಿದು ಬಂದಿದೆ.ಪ್ರಕರಣದ ಆರೋಪಿತರನ್ನು ಪತ್ತೆ ಮಾಡುವಲ್ಲಿ ಚನ್ನಗಿರಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.