ದಾವಣಗೆರೆ ಹೊರವಲಯದ ಗ್ರಾಮದಲ್ಲಿ ಕುಕ್ಕವಾಡ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮನೆಗೆ ನುಗ್ಗಿ, ಗೋಡೆ ಕುಸಿದು ಅಪಘಾತಕ್ಕೀಡಾಗಿರುವ ಘಟನೆ ಸೋಮವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ. ದಾವಣಗೆರೆ ತಾಲೂಕಿನ ಕುಕ್ಕುವಾಡ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವೃತ್ತದ ಬೆಂಚ್ ಮತ್ತು ಗೋಡೆಗೆ ಬಡಿದು ವೃತ್ತದ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್ ಗೆ ಬಡಿದು ನಂತರ ಮನೆಯ ಗೋಡೆಗೆ ನುಗ್ಗಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮನೆಯ ಗೋಡೆ ಕೂಡ ಕುಸಿದು ಬಿದ್ದುಹೋಗಿದ್ದು, ರೂಮಿನಲ್ಲಿ ಮಲಗಿದ್ದ ವೃದ್ದೆಯೊಬ್ಬರು ಗಾಯಗೊಂಡಿದ್ದಾರೆ. ಮನೆಯ ಕಾಂಪೌಂಡ್ ಗೋಡೆ ಕೂಡ ಕುಸಿದಿದೆ. ಕಾರು ತ್ಯಾವಣಿಗೆ ರಸ್ತೆಯ ಕಡೆಯಿಂದ ದಾವಣಗೆರೆ ಕಡೆಗೆ ಸಾಗುತ್ತಿತ್ತು ಎನ್ನಲಾಗಿದ್ದು, ಕಾರಿನಲ್ಲಿ ನಾಲ್ವರು ಇದ್ದರು ಎನ್ನಲಾಗಿದೆ. ಸ್ಥಳೀಯರ ಪ್ರಕಾರ ಅಪಘಾತಕ್ಕೆ ಅತಿ ವೇಗವೇ ಕಾರಣ, ಕಾರಿನಲ್ಲಿದ್ದ ನಾಲ್ವರು ಕೂಡ ಮಧ್ಯಪಾನ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ. ಕಾರು ಬಡಿದು ಗೋಡೆ ಕುಸಿದು ಬಿದ್ದಿರುವ ಮನೆ ನಿವೃತ್ತ ಶಿಕ್ಷಕರಾದ ದಿವಂಗತ ಸುರೇಂದ್ರಪ್ಪ ಎನ್ನುವವರಿಗೆ ಸೇರಿದ್ದು ಎನ್ನಲಾಗಿದ್ದು, ರೂಮಿನಲ್ಲಿ ಮಲಗಿದ್ದ ಅವರ ಧರ್ಮ ಪತ್ನಿ ಲಲಿತಮ್ಮ ಅವರಿಗೆ ಕೆಲವು ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಬಡಿದ ತೀವ್ರತೆಗೆ ಅಂಬೇಡ್ಕರ್ ವೃತ್ತದಲ್ಲಿ ಪಾದಾಚಾರಿಗಳು ಕುಳಿತು ಕೊಳ್ಳಲು ಹಾಕಿರುವ ಸಿಮೆಂಟ್ ಆಸನ ಮತ್ತು ಕಾಂಪೌಂಡ್ ನ ಮೂಲೆ ಕೂಡ ನುಜ್ಜುಗುಜ್ಜಾಗಿ ಬಿದ್ದಿವೆ.