ಚಿತ್ರದುರ್ಗ ಶ್ಚಿಮ ಘಟ್ಟದ ಜನರು ದಿನನಿತ್ಯ ಪರಿಸರ ಉಳಿಸುವುದು ಹೇಗೆ ?, ಅಭಿವೃದ್ಧಿಯೆಂಬ ಮಾರಕಾಸ್ತ್ರ ಪರಿಸರವನ್ನು ನಾಶ ಮಾಡುತ್ತಾ ಬರುತ್ತಿದೆ, ಅದರ ಉಳಿವಿಗಾಗಿ ಯಾವ ರೀತಿ ಹೋರಾಟ ಮಾಡಬೇಕು, ಯಾವ ತ್ಯಾಗಕ್ಕಾಗಿ ಸಿದ್ದರಾಗಬೇಕು ಎಂದು ದಿನನಿತ್ಯ ಯೋಚಿಸುತ್ತಾ, ತಮ್ಮ ದೈನಂದಿನ ಕೆಲಸಗಳನ್ನು, ದುಡಿಮೆಗಳನ್ನ ಬದಿಗಿಟ್ಟು, ಪರಿಸರ ಉಳಿಸುವುದರ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ನದಿ ಉಳಿಸಬೇಕು, ಕಾಡನ್ನು ಉಳಿಸಬೇಕು, ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳನ್ನು ಉಳಿಸಿಕೊಳ್ಳಬೇಕು, ಅಭಿವೃದ್ಧಿಯ ಹೆಸರಿನಲ್ಲಿ ಇವುಗಳ ಮೇಲೆ ದಿನನಿತ್ಯ ಆಕ್ರಮಣ ನಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.
ಪಶ್ಚಿಮ ಘಟ್ಟಗಳ ಬಳಿ ಅಣೆಕಟ್ಟುಗಳನ್ನು ಕಟ್ಟಿದಾಗ, ಮುಳುಗಡೆಯಾದ ಪ್ರದೇಶದಿಂದ ಜನರನ್ನ ಎತ್ತಂಗಡಿ ಮಾಡಿ, ಎತ್ತರದ ಪ್ರದೇಶಕ್ಕೆ ತಂದು ಕೂರಿಸಿದಾಗ, ಮತ್ತೆ ಅಣೆಕಟ್ಟುಗಳನ್ನ ವಿಸ್ತಾರ ಗೊಳಿಸುತ್ತಾ ಹೋದಾಗ, ಎತ್ತರದ ಪ್ರದೇಶಗಳು ಸಹ ಎರಡನೇ ಸಾರಿ ಬರಿ ಮುಳುಗಡೆಯಾದಾಗ ಈ ಜನರು ಮತ್ತೆ ಸ್ಥಾನ ಪಲ್ಲಟ ಹೊಂದಿ, ಅರಣ್ಯದ ಸುತ್ತಮುತ್ತನೆ ಬದುಕು ಸಾಗಿಸುತ್ತಿರುವ ಇವರಿಗೆ, ಈಗ ಕಾಡಿನ ರಕ್ಷಣೆ ಮಾಡಿಕೊಳ್ಳುವುದು ಹೇಗೆ? ತಮ್ಮ ಉಳಿವಿಗಾಗಿ ಹೋರಾಟ ಮಾಡಿಕೊಳ್ಳುವುದು ಹೇಗೆ? ಅವರನ್ನು ಪ್ರತಿ ಸಾರಿ ಒಕ್ಕಲೆಬ್ಬಿಸುತ್ತಿರುವುದರಿಂದ, ಅವರ ಜೀವನ ಅತಂತ್ರವಾಗಿ ನಿಂತಿದೆ ಎಂದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ, ಅಧಿಕಾರಿಗಳ ಕಣ್ಣಿಗೆ ಬೀಳುವುದು ಪಶ್ಚಿಮ ಘಟ್ಟಗಳಲ್ಲಿರುವ ಅಣೆಕಟ್ಟಿನ ನೀರು. ಆ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಪಂಪ್ ಮಾಡಿ, 400 ಕಿಲೋಮೀಟರ್ ಅಷ್ಟು ದೂರ ನೀರನ್ನು ತೆಗೆದುಕೊಂಡು ಹೋಗಿ, ಬೆಂಗಳೂರಿನ್ನ ಸಂಭಾಳಿಸಬೇಕಾಗಿದೆ. ಅದಕ್ಕಾಗಿ ಸಾಕಷ್ಟು ಕಾಡುಗಳನ್ನು ಕಡಿಯಬೇಕಾಗುತ್ತದೆ ಹಾಗೂ ನೀರನ್ನು 400 ಕಿಲೋಮೀಟರ್ ದೂರದವರೆಗೂ ಎತ್ತಿಕೊಂಡು ಹೋಗುವುದು ದೊಡ್ಡ ಯೋಜನೆಯಾಗಿ, ಹಣ ಮತ್ತು ಶಕ್ತಿಯ ವ್ಯಯವಾಗುತ್ತದೆ, ಪರಿಸರವು ನಾಶವಾಗುತ್ತದೆ. ಹಾಗಾಗಿ ಈ ಯೋಜನೆಯನ್ನ ಕೈ ಬಿಡಿ ಎಂದು ಪಶ್ಚಿಮ ಘಟ್ಟದ ಜನರು ಒತ್ತಾಯ ಪಡಿಸುತ್ತಿದ್ದಾರೆ, ಆದರೆ ಬೆಂಗಳೂರಿನಲ್ಲಿ ವಾಸವಾಗಿರುವ ಜನ ಯಾವ ಘಟ್ಟ ಹಾಳಾದರೆ ಏನಂತೆ, ನಮಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ, ನಮಗೆ ನೀರು ತಂದು ಒದಗಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಹಾಗಾಗಿ ಅಧಿಕಾರಿಗಳಿಗೆ, ಸರ್ಕಾರದ ಆಡಳಿತಗಾರರಿಗೆ, ಯಾರ ಕಡೆ ನ್ಯಾಯ ತೀರ್ಮಾನ ಮಾಡಬೇಕು ಎಂಬುದೇ ತಿಳಿಯದಾಗಿದೆ, ಹಾಗೆ ಜನರು ಸಹ ವಿಧಿ ಇಲ್ಲದೆ ಹೋರಾಟಕ್ಕಿಳಿಯಲು ತಯಾರಾಗುತ್ತಿದ್ದಾರೆ. ಇತ್ತಕಡೆ ಪೈಪ್ ಲೈನ್ ಹಾಕಲು ಅಭಿವೃದ್ಧಿಯ ಇಲಾಖೆಯವರು ಸಿದ್ದರಾಗುತ್ತಿದ್ದಾರೆ, ಈ ಜಂಜಾಟದಿಂದ ಮನುಷ್ಯನನ್ನು ವಿಮುಕ್ತಿ ಗೊಳಿಸುವುದು ಹೇಗೆ ಎಂದು ನಾವು ಈಗ ಯೋಚಿಸುವಂತಾಗಿದೆ ಎಂದರು.
ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಜನ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡದ ಜಿಲ್ಲೆಯ ಸಾಕಷ್ಟು ವಿದ್ಯಾರ್ಥಿಗಳು, ಅಲ್ಲಿಯ ಜನರ ಮಕ್ಕಳುಗಳು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ದುಡಿಮೆ ಮಾಡುತ್ತಿದ್ದು, ಅವರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂಬ ಮಾತನ್ನು ಏಕ ಧ್ವನಿಯಲ್ಲಿ ಹೇಳಲಾರದಂತ ಸಂಕಷ್ಟಕ್ಕೆ ಬಂದು ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲರ ಹುದ್ದೆಗಳು ಸಹ ಬೆಂಗಳೂರಲ್ಲೇ ಏರ್ಪಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಓದಲು, ಬರೆಯಲು, ಜ್ಞಾನಾರ್ಜನೆಗೊಕೊಳ್ಳಲು, ಪೈಪೋಟಿಯಲ್ಲಿ ಧುಮುಕಿ, ಬೆಂಗಳೂರನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ, ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಜನರಿಗೆ ನೀರು ಒದಗಿಸಬೇಕಾದ ಪರಿಸ್ಥಿತಿ ಬಂದಿದೆ. ಹಾಗಾಗಿ ಸಣ್ಣ ಸಣ್ಣ ಸ್ಥಳಗಳಲ್ಲಿ ಜನರಿಗೆ ಉದ್ಯೋಗ ದೊರೆಯುವಂತೆ ಮಾಡಿದರೆ ಮಾತ್ರ ಬೆಂಗಳೂರು ಎಂಬ ಮಹಾನಗರಕ್ಕೆ ಕುಡಿಯುವ ನೀರಿನ್ನ ಹೊಂದಿಸಲು 400 ಕಿಲೋಮೀಟರ್, 800 ಕಿಲೋಮೀಟರ್ ನಿಂದ ಪ್ರಯತ್ನ ಪಡುವುದನ್ನು ತಪ್ಪಿಸಬಹುದು ಎಂದರು.
ವಿದ್ಯುತ್ ಶಕ್ತಿಯ ಒತ್ತಡ ಹೆಚ್ಚಾಗುತ್ತಿದ್ದು, ಅಭಿವೃದ್ಧಿಗೆ ವಿದ್ಯುತ್ ಶಕ್ತಿ ಇಲ್ಲದಿದ್ದರೆ ಸಾಧ್ಯವಿಲ್ಲ ಎಂದು, ಡ್ಯಾಮ್ ನಲ್ಲಿರುವ ನೀರನ್ನೇ ಮತ್ತೆ ಡ್ಯಾಮಿಗೆ ಮರುಪಂಪ್ ಮಾಡಿ, ಅದರಿಂದ ಮತ್ತೆ ವಿದ್ಯುತ್ ಶಕ್ತಿ ತಯಾರಿಸುವಂತಹ ಯೋಜನೆಗಳನ್ನು ಕಂಡುಹಿಡಿದಿದ್ದಾರೆ. ಒತ್ತಡ ಇದ್ದಾಗ ಕರೆಂಟನ್ನು ಬಳಕೆ ಮಾಡುವುದು, ಒತ್ತಡ ಇಲ್ಲದಿದ್ದಾಗ ಅದೇ ಕರೆಂಟನ್ನು ಉಪಯೋಗಿಸಿ ಡ್ಯಾಮಿನ ಕೆಳಗಿರುವ ನೀರನ್ನು ಮತ್ತೆ ವಿದ್ಯುತ್ ಅನ್ನು ಉತ್ಪಾದನೆ ಮಾಡುವ ಪ್ರಯತ್ನಕ್ಕೆ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಯೋಜನೆಗಳಿಂದ ಪಶ್ಚಿಮ ಘಟ್ಟಗಳು ನಾಶವಾಗುತ್ತವೆ ಮತ್ತು ಹಣದ ವ್ಯಯವಾಗುತ್ತದೆ, ಇದರಿಂದ ಯಾವುದೇ ಲಾಭವಿಲ್ಲ ಎಂದು ಇಲ್ಲಿಯ ಜನರು ಅಧಿಕಾರಿಗಳ ಮನಸ್ಸನ್ನ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಭಿವೃದ್ಧಿಯೆಂಬ ರಾಕ್ಷಸ ಇವರನ್ನ ಬೆಂಬಿಡದೆ ಕಾಣಿಸುತ್ತಿರುವುದರಿಂದ, ಚಿಂತಿಸುವಂತೆ ಆಗಿದೆ. ಹಾಗಾಗಿ ಇಲ್ಲಿಯ ಜನರು ಹೋರಾಟ ಮಾಡುವುದೇಗೆ ?, ಪರಿಸರವನ್ನು ಉಳಿಸಿಕೊಳ್ಳುವುದು ಹೇಗೆ ?,ಎಂದು ಪಾದಯಾತ್ರೆ ಮಾಡಬೇಕೋ, ಉಪಾಸ ಸತ್ಯಾಗ್ರಹ ಮಾಡಬೇಕೋ ಅಥವಾ ಜೈಲಿಗೆ ಹೋಗಿ ಜೈಲು ಬರೋ ಕಾರ್ಯಕ್ರಮ ಮಾಡಿಕೊಳ್ಳಬೇಕೋ ಎಂದು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಮಧ್ಯದೊಂದು ರೇಖೆಯನ್ನು ನಾವು ಮುಟ್ಟಲು ಇಲ್ಲಿವರೆಗೂ ಸಾಧ್ಯವಾಗಿಲ್ಲ. ಅಭಿವೃದ್ಧಿ ಎಂಬುದು ರಾಕ್ಷಸ ಗಾತ್ರದಲ್ಲಿ ಬೆಳೆಯುತ್ತಿದೆ, ಪರಿಸರ ಉಳಿಸುವವರು ಸ್ವಲ್ಪವಾದರೂ ಪರಿಸರ ಉಳಿಲಿ ಎಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಲ್ಲಿಯ ಜನ ಸುತ್ತಮುತ್ತಲಿರುವ ಎಲ್ಲಾ ಸ್ವಾಮೀಜಿಗಳನ್ನ, ಮಠಾಧೀಶರುಗಳನ್ನ, ರಾಜಕೀಯ ವ್ಯಕ್ತಿಗಳನ್ನ, ಅಧಿಕಾರಿಗಳನ್ನು, ವೈದ್ಯರನ್ನ, ಸಾಹಿತಿಗಳನ್ನ, ವಿದ್ಯಾರ್ಥಿಗಳನ್ನ ಸಂಘಟಿಸಿ ಹೋರಾಟಕ್ಕೆ ಸಿದ್ಧವಾಗುತ್ತಿದ್ದಾರೆ ಎಂದರು.
ಮನುಷ್ಯ ಸರಳತೆಯಿಂದ ಜೀವನ ಮಾಡಿ, ಹತ್ತಿರದ ವಸ್ತುಗಳನ್ನು ಉತ್ಪಾದನೆ ಮಾಡಿಕೊಂಡು, ಸ್ವದೇಶಿ ತತ್ವವನ್ನು ಅಳವಡಿಸಿಕೊಂಡು, ಗ್ರಾಮೀಣಾಭಿವೃದ್ಧಿಯನ್ನ ಮಾಡಿಕೊಂಡಿದ್ದರೆ ಇಂತಹ ಸಂಕಷ್ಟಗಳು ನಮಗೆ ಎದುರಾಗುತ್ತಿರಲಿಲ್ಲ, ಸ್ವತಂತ್ರ ಪೂರ್ವದಲ್ಲಿ ಎಲ್ಲವನ್ನು ನಾವು ಯೋಜನೆ ರೂಪದಲ್ಲಿ ತಂದಿದ್ದರೆ ಇಂದು ಈ ಮಟ್ಟದ ಪರಿಸರದ ಉಳಿವಿಗಾಗಿ ಹೋರಾಟಗಳು ನಡೆಯುತ್ತಿರಲಿಲ್ಲ, ಇದರ ಬಗ್ಗೆ ಈಗಲಾದರೂ ನಾವು ಯೋಚನೆ ಮಾಡಿದರೆ, ಖಂಡಿತ ನಾವು ಮುಂದಿನ ಜನಾಂಗವನ್ನು ಈ ಪರಿಸರ ನಾಶದಿಂದ ಕಾಪಾಡಿಕೊಳ್ಳಬಹುದು ಎಂದರು.